ಬ್ರೇಕಿಂಗ್ ನ್ಯೂಸ್
ದೊಡ್ಡಬಳ್ಳಾಪುರ : ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಸಕ ಧೀರಜ್ ಮುನಿರಾಜ್

ದೊಡ್ಡಬಳ್ಳಾಪುರ : ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಸಕ ಧೀರಜ್ ಮುನಿರಾಜ್

ಈಜಗತ್ತು ನ್ಯೂಸ್ ಡೆಸ್ಕ್
News desk
April 28, 2025, 9:24 am
ಬೆಂಗಳೂರು : ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದ್ದಾರೆ. 

 ನಿನ್ನೆ ದಿನ ದೇವನಹಳ್ಳಿಯಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೇಟಿ ಮಾಡಿದ ಶಾಸಕ ಧೀರಜ್ ಅವರು ಮನವಿಪತ್ರ ಸಲ್ಲಿಸಿದರು.

 ಮನವಿ ಪತ್ರದ ಸಾರಾಂಶ:

 ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರಿಗೆ ಆತ್ಮೀಯ ಸ್ವಾಗತ. ಕಳೆದ ಎರಡು ವರ್ಷಗಳಿಂದ ಆಡಳಿತ ಚುಕ್ಕಾಣಿಯನ್ನು ಹಿಡಿದು ರಾಜ್ಯವನ್ನು ಮುನ್ನಡೆಸುತ್ತಿರುವ ನಿಮಗೆ ಅಭಿನಂದನೆಯನ್ನು ತಿಳಿಸುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರಕ್ಕೆ 2024 -25 ಬಜೆಟ್ ನಲ್ಲಿ ದೊಡ್ಡಬಳ್ಳಾಪುರರವನ್ನು 'ಸ್ಯಾಟೆಲೈಟ್ ಟೌನ್' ಆಗಿ ಪರಿವರ್ತಿಸುವುದಾಗಿ ಘೋಷಣೆಯಾಗಿತ್ತು. 2025-26ರ ಬಜೆಟ್ ನಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣವು ಮಂಜೂರಾಗಿತ್ತು. ಸದರಿ ಯೋಜನೆಗಳನ್ನು ಘೋಷಿಸಿದ್ದಕ್ಕಾಗಿ ತಮಗೆ ನನ್ನ ಕ್ಷೇತ್ರದ ಜನರ ಪರವಾಗಿ ಹಾಗೂ ವೈಯುಕ್ತಿಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದಿದ್ದಾರೆ. 

 ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಕ್ರೀಡಾಂಗಣ ಮಂಜೂರಾಗಿದ್ದರೂ ಸಹ ಇದುವರೆಗೂ ಸರ್ಕಾರದಿಂದ ಅನುದಾನ ನೀಡಿರುವುದಿಲ್ಲ. ದಯವಿಟ್ಟು ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಸ್ಮಾಟಲೈಟ್ ನಗರ ಹಾಗೂ ಇತರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸೂಕ್ತ ಅನುದಾನವನ್ನು ಮೀಸಲಿಟ್ಟು ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ಮನವಿ ಮಾಡುತ್ತೇನೆ. ಹಾಗೂ, ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನ ನೀಡುವ ಮೂಲಕ ಅತಿ ಶೀಘ್ರದಲ್ಲಿ ಕಾಮಗಾರಿಯನ್ನು ಪೂರೈಸಿ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲೇ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

  ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿ ಕಳೆದ ಎರಡು ವರ್ಷಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಮಂಜೂರಿ ಮಾಡಿಕೊಡಬೇಕೆಂದು ಸದನದಲ್ಲಿ ಪುಸ್ತಾಪಿಸಿದ ಹಲವು ದಾಖಲೆಗಳನ್ನು ಹಾಗೂ ಲಿಖಿತ ಮನವಿಯನ್ನು ಈ ಪತ್ರದ ಮೂಲಕ ಲಗತ್ತಿಸಿ ತಮ್ಮ ಗಮನಕ್ಕೆ ತರಲಿಚ್ಛಿಸುತ್ತೇನೆ. ಈ ಕೆಳಕಂಡ ಎಲ್ಲ ಸಮಸ್ಯೆಗಳು, ಅತಿ ಜರೂರಾಗಿದ್ದು ತಾವು ಇದನ್ನು ಆದ್ಯತೆಯ ಮೇಲೆ ಸದರಿ ಮನವಿಯನ್ನು ಪರಿಗಣಿಸಿ ಕ್ಷಿಪ್ರವಾಗಿ ಮಂಜೂರಿಸಿ ದೊಡ್ಡಬಳ್ಳಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದಿದ್ದಾರೆ.

ಮೂಲಭೂತವಾಗಿ ಅತಿ ಜರೂರಾಗಿ ಆಗಬೇಕಾಗಿರುವ ಕಾಮಗಾರಿಗಳು: 

 ಜಿಲ್ಲಾಸ್ಪತ್ರೆಯ ಶಂಕುಸ್ಥಾಪನೆ ಆಗಿದೆ ನಂತರ ಇದು ವರೆಗೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ಜಿಲ್ಲಾಸ್ಪತ್ರೆಯ ಶಂಕುಸ್ಥಾಪನೆ ಮುಖ್ಯ ಮಂತ್ರಿಗಳ ಅಮೃತ ಹಸ್ತದಿಂದ ನೆರವೇರಿದರೂ ಸಹ ಇದುವರೆಗೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ಸಾಧನಾ ಸಮಾವೇಶದ ರೂವಾರಿಗಳಾದ ಮುಖ್ಯ ಮಂತ್ರಿಗಳು ನಮ್ಮ ಜಿಲ್ಲೆಗೆ ಭೇಟಿ ನೀಡಿ 'ಗ್ಯಾರಂಟಿ ಸಮಾವೇಶದಲ್ಲಿ' ದಿನಾಂಕ 11 ಮಾರ್ಚ್ 2024 ರಲ್ಲಿ ಪಾಲ್ಗೊಂಡಾಗ ಆರೋಗ್ಯ ಇಲಾಖೆಯ ವತಿಯಿಂದ 167 ಕೋಟಿ ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಸ್ಪತ್ರೆಗೆ ಶಂಕು ಸ್ಥಾಪನೆ ನೆರವೇರಿಸಿದ್ದಷ್ಟೇ. ಇದುವರೆಗೂ ಈ ಯೋಜನೆ ಆರಂಭವಾಗಿಲ್ಲ. ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆಯನ್ನು ಖುದ್ದು ಮುಖ್ಯಮಂತ್ರಿಗಳೇ ನೆರವೇರಿಸಿದ್ದು, ದಯವಿಟ್ಟು ಆದ್ಯತೆಯ ಮೇರೆಗೆ ಸದರಿ ಯೋಜನೆಗೆ ಅನುದಾನವನ್ನು ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ. ಜನರಿಗೆ ಉತ್ತಮ ಆರೋಗ್ಯ ಹಾಗೂ ಸೇವೆ ನೀಡುವ ನಿಟ್ಟಿನಲ್ಲಿ ಈ ಆಸ್ಪತ್ರೆಯು ಪೂರಕವಾಗುವುದರಿಂದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅನುದಾನ ನೀಡಬೇಕೆಂದು ಮನವಿ ಮಾಡಿದ್ದಾರೆ. 

  ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಾತಗಳು ಹೆಚ್ಚಾಗುವ ಕಾರಣ ಅಫಘಾತ ಆದವರಿಗೆ ತುರ್ತಾಗಿ ಚಿಕಿತ್ಸೆ ನೀಡುವ ಸಲುವಾಗ 'ಟ್ರಾಮಾ ಕೇರ್ ಸೆಂಟರ್' ಅನ್ನು ಪ್ರಾರಂಭಿಸಲು ಇದ್ದ ಪ್ರಸ್ತಾವನೆಯು ಕಾರ್ಯಗತಗೊಂಡಿಲ್ಲ. ಈ ಕುರಿತು ಸದನದಲ್ಲಿ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಟ್ರಾಮಾ ಕೇರ್ ಸೆಂಟರ್ ಅನ್ನು ಮಂಜೂರು ಮಾಡುವುದರಿಂದ ಅಫಘಾತಕ್ಕೆ ಈಡಾದವರ ಪ್ರಾಣವನ್ನು ರಕ್ಷಿಸಬಹುದು ಎಂದಿದ್ದಾರೆ.

 ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಕಾವೇರಿ ನೀರಿನ ಬೇಡಿಕೆ:

  ಅತ್ಯಂತ ವೇಗವಾಗಿ ಬೆಳೆಯುತ್ತಿರುವ, ಜನಸಂಖ್ಯೆ ಹೆಚ್ಚಾಗಿರುವ ದೊಡ್ಡಬಳ್ಳಾಪುರಕ್ಕೆ ಅಲ್ಪ ಪ್ರಮಾಣದ ನೀರು ಸಾಲುವುದಿಲ್ಲ. ದೊಡ್ಡಬಳ್ಳಾಪುರ ನಗರ ಸಭಾ ವ್ಯಾಪ್ತಿಯಲ್ಲಿ ನೀರಿನ ಬವಣೆ ನೀಗಿಸಲು ಕಾವೇರಿ ನೀರನ್ನು ನೀಡುವುದು ಅತ್ಯಗತ್ಯವಾಗಿದೆ. ದೊಡ್ಡಬಳ್ಳಾಪುರ ನಗರ ಸಭಾ ವ್ಯಾಪ್ತಿಯಲ್ಲಿ ಜನ ಸಂಖ್ಯೆ 150000 ಹೊಂದಿದ್ದು ಪ್ರಸ್ತುತ ಜಕ್ಕಲಮಡಗು ಜಲಾಶಯದಿಂದ ಕೇವಲ 33% ರಷ್ಟು ನೀರು ಸಿಗುತ್ತಿದೆ. ಈ ನೀರು ಎಂಟು ದಿನಗಳಿಗೆ ಒಮ್ಮೆ ಸಾರ್ವಜನಿಕರಿಗೆ ಪೂರೈಕೆ ಆಗುತ್ತಿದ್ದು, ಕುಡಿಯುವ ನೀರಿಗೆ ತೀವ್ರ ತತ್ವಾರ ಉಂಟಾಗಿದೆ. ಆದ ಕಾರಣ ನಮ್ಮ ತಾಲೂಕಿನ ನೀರಿನ ಬವಣೆಯನ್ನು ನೀಗಿಸಲು ತುರ್ತಾಗಿ ಕಾವೇರಿ ನೀರನ್ನು ಕೊಡಬೇಕಾಗಿ ಮನವಿ ಮಾಡುತ್ತೇನೆ. 

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ತಾಲೂಕುಗಳಿಗೆ ಕಾವೇರಿ ಆರನೇ ಹಂತದಲ್ಲಿ ಕುಡಿಯುವ ನೀರು ಯೋಜನೆ ಮಂಜೂರಾಗಿದೆ, ಆದರೆ ದೊಡ್ಡಬಳ್ಳಾಪುರಕ್ಕೆ ಕಾವೇರಿ ನೀರು ನೀಡಬೇಕೆಂದು ಸದನದಲ್ಲಿ ಆಗ್ರಹಿಸಿದರೂ ಸಹ ಕಾವೇರಿ ನೀರು ಕೊಡಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. 

 ಮುಂದುವರೆದು, ಮಜರಾ ಹೊಸಹಳ್ಳಿ ಹಾಗೂ ದೊಡ್ಡ ತುಮಕೂರು ಪಂಚಾಯತಿಗಳಿಗೆ ಕಾವೇರಿ ನೀರು ಬಾರದ ಕಾರಣ ಸದರಿ ಪಂಚಾಯ್ತಿಯ ವ್ಯಾಪ್ತಿಗೆ ಬರುವ ಗ್ರಾಮಸ್ಥರು ಕೊಳವೆ ಬಾವಿಗೆ ಮೊರೆ ಹೋಗಿದ್ದಾರೆ. ಕೈಗಾರಿಕಾ ತ್ಯಾಜ್ಯ ಸೇರಿದಂತೆ ಸಂಸ್ಕರಿಸದ ಒಳಚರಂಡಿ ನೀರಿನಿಂದ ಅಂತರ್ಜಲ ಕಲುಷಿತಗೊಂಡಿರುವ ಕಾರಣ ಕೊಳವೆ ಬಾವಿಯ ನೀರು ಬಳಸಲು ಯೋಗ್ಯವಾಗಿರುವುದಿಲ್ಲ. ಆದ ಕಾರಣ, ಸದರಿ ಪಂಚಾಯ್ತಿಗಳಿಗೆ ಕಾವೇರಿ ನಾಲಕ್ಕನೆ ಹಂತದ ಯೋಜನೆಯಲ್ಲೇ ತುರ್ತಾಗಿ ಕುಡಿಯುವ ನೀರು ಒದಗಿಸಿಕೊಟ್ಟು ಈ ಭಾಗದ ಜನರ ನೀರಿನ ಬವಣೆಯನ್ನು ನೀಗಿಸಬೇಕೆಂದು ಮನವಿ ಮಾಡಿದ್ದಾರೆ. 

  ದೊಡ್ಡಬಳ್ಳಾಪುರ ಕ್ಷೇತ್ರದ ನೀರಿನ ಬವಣೆಯನ್ನು ನೀಗಿಸಲು ಮಂಜೂರಿಸಿದ 10 ಕೋಟಿ 11 ಲಕ್ಷ ಪೈಪ್ ಲೈನ್ ಯೋಜನೆಯು ಪ್ರಾರಂಭಗೊಳ್ಳದೆ ಇರುವುದು ಜನರನ್ನು ತೀವು ಸಂಕಷ್ಟಕ್ಕೆ ಈಡು ಮಾಡಿದೆ. ನಿಗದಿ ಮಾಡಿದ ಕಾಲಮಿತಿಯಲ್ಲಿ ಯೋಜನೆಯನ್ನು ಮುಗಿಸಿ ನಮ್ಮ ದೊಡ್ಡಬಳ್ಳಾಪುರದ ನಾಗರೀಕರ ನೀರಿನ ಬವಣೆಯನ್ನು ನೀಗಿಸಬೇಕಾಗಿದ್ದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ತಾಲೂಕುಗಳಿಗೆ ಕಾವೇರಿ ಆರನೇ ಹಂತದಲ್ಲಿ ಕುಡಿಯುವ ನೀರು ಯೋಜನೆ ಮಂಜೂರಾಗಿದೆ, ಆದರೆ ದೊಡ್ಡಬಳ್ಳಾಪುರಕ್ಕೆ ಕಾವೇರಿ ನೀರು ನೀಡಬೇಕೆಂದು ಸದನದಲ್ಲಿ ಆಗ್ರಹಿಸಿದರೂ ಸಹ ಕಾವೇರಿ ನೀರು ಕೊಡಲಾಗುವುದಿಲ್ಲ ಎಂದು ನೀರಾವರಿ ಇಲಾಖೆ ತಿಳಿಸಿದೆ. 

 ಅಂತರ್ಜಲ ಕಲುಷಿತ ಗೊಳಿಸಿದ ಸಾಧನೆ:

 ನಮ್ಮ ತಾಲೂಕಿನಲ್ಲಿ ಕೈಗಾರಿಕಾ ತ್ಯಾಜ್ಯ ಹಾಗೂ ಕೊಳಚೆ ನೀರಿನ ಅಸಮರ್ಪಕ ನಿರ್ವಹಣೆಯಿಂದ ಅಂತರ್ಜಲ ಕಲುಷಿತವಾಗಿದೆ. ಅಧಿವೇಶನದಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿದರೂ ಸಹ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೆರಗಳಿಗೆ ಸಂಸ್ಕರಿಸಿದ ಒಳಚರಂಡಿ ನೀರು ಹಾಗೂ ಕೈಗಾರಿಕಾ ತ್ಯಾಜ್ಯವನ್ನು ಬಿಟ್ಟು ಕಲುಷಿತಗೊಳಿಸಿದ್ದಕ್ಕೆ ರಾಷ್ಟ್ರೀಯ ಹಸಿರು ಮಂಡಳಿಯು (NGT) ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಛೀಮಾರಿ ಹಾಕಿದ್ದರೂ ಸಹ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರ ನಗರಕ್ಕೆ STP ಹಾಗೂ UGD ಒದಗಿಸಲು ಈಗಾಗಲೇ ಡಿಫ್ ಮಾಡಲಾಗಿದೆ, ಯೋಜನೆ ಅನುಷ್ಠಾನ ಗೊಳಿಸಲು ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಬಿಡಿಗಾಸನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. 

 ಒಳಚರಂಡಿ:

  ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ಮೂಲಭೂತ ಸೌಕರ್ಯವಾಗಿದ್ದು, ಇದು ಅತ್ಯಾವಶ್ಯಕವಾಗಿರುವುದರಿಂದ, ದೊಡ್ಡಬಳ್ಳಾಪುರ ನಗರ ಸಭೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಈ ಕೂಡಲೇ ತಾವು ಅನುದಾನ ಮೀಸಲಿಟ್ಟು ಆದೇಶ ಹೊರಡಿಸಬೇಕೆಂದು ಕೋರಿದ್ದಾರೆ.

  ದೊಡ್ಡಬಳ್ಳಾಪುರಕ್ಕೆ ಕಸದ ಕಂಟಕ:

 ತಮ್ಮ ಕಳೆದ ಅವಧಿಯಲ್ಲಿ (2015) ಟೆರ್ರಾ ಫಾರಂ ಎಂಬ ಕಸ ವಿಲೇವಾರಿ ಘಟಕವನ್ನು ಮುಚ್ಚಲಾಗಿತ್ತು. ಆದರೆ, ಸದರಿ ಘಟಕವನ್ನು ಪುನರಾರಂಭಿಸುವ ಕುರಿತಾಗಿ ಪ್ರಸ್ತಾವನೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ ಹಾಗೂ ಘಟಕವನ್ನು ಪುನರಾರಂಭಿಸಲು ಸಂಪುಟದಲ್ಲೂ ಚರ್ಚೆಯಾಗಿದೆ ಎಂದು ತಿಳಿದು ಬಂದಿದೆ. ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿನನ್ವಯ ಹಾಗೂ ಕಳೆದ ಬಾರಿ ತಾವೇ ಮುಚ್ಚಿಸಿದಂತ ಟೆರ್ರಾ ಫಾರಂ ಕಸದ ಘಟಕವನ್ನು ಯಾವುದೇ ಕಾರಣಕ್ಕೂ ಪುನರಾರಂಭ ಮಾಡಬಾರದು ಎಂದು ನನ್ನ ಕ್ಷೇತ್ರದ ಜನರ ಪರವಾಗಿ ವಿನಂತಿಸುತ್ತೇನೆ. ಒಂದು ವೇಳೆ ಘಟಕವನ್ನು ಪುನರಾರಂಭ ಮಾಡಿದಲ್ಲಿ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಈ ಮೂಲಕ ಹೇಳಲಿಚ್ಛಿಸುತ್ತೇನೆ. 

  ಎಂ.ಎಸ್.ಜಿ.ಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಈಗ ಹಾಕುತ್ತಿರುವ ಜೊತೆ ಇನ್ನಷ್ಟು ಹೆಚ್ಚುವರಿ ಕಸ ಹಾಕಬಾರದು ಎಂದು ನೋಟೀಸು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಬಿಎಂಪಿಯ ಎಲ್ಲ 7 ಘಟಕಗಳೂ ಪಾರದರ್ಶಕವಾಗಿ ಟೆಂಡರ್ ಮೂಲಕ ಆಯ್ಕೆಯಾಗಿ ಸರ್ಕಾರದ ಸ್ವಾಮ್ಯದ್ದಾಗಿದ್ದರೆ, ಕೇವಲ ಎಂ.ಎಸ.ಜಿ.ಪಿ ಮಾತ್ರ ಖಾಸಗಿ ಒಡೆತನದ್ದಾಗಿದೆ. ಈ ಎಂ.ಎಸ.ಜಿ.ಪಿ ಘಟಕವು ಖಾಸಗಿ ಒಡೆತನದ್ದಾಗಿದ್ದು ಬಹಳಷ್ಟು ಅವ್ಯವಹಾರಗಳು ನಡೆಯುತ್ತಿದೆ ಎಂಬ ಅಪಾದನೆಗಳಿವೆ. ಸದರಿ ಘಟಕವು ಅವೈಜ್ಞಾನಿಕವಾಗಿ ಕಾರ್ಯನಿರ್ವಹಿಸುತ್ತಿದ್ದು ಹಾಗೂ ಪ್ರಮಾಣಿತ ಕಾರ್ಯಾಚರಣಾ ವಿಧಾನದ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಉಲ್ಲಂಘನೆಯಿಂದ ವಾಯು ಹಾಗೂ ಜಲ ಮಾಲಿನ್ಯವಾಗುತ್ತಿದೆ. ಸದರಿ ತ್ಯಾಜ್ಯ ವಿಲೇವಾರಿ ಘಟಕವು ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯ ನಿರ್ವಹಿಸುತ್ತಿದೆ. 

 2004 ರಿಂದ ಸೂರಿಲ್ಲ:

 2004 ರಿಂದ ಒಂದು ಮನೆಯನ್ನೂ ವಸತಿರಹಿತರಿಗೆ ನೀಡದ ಸರ್ಕಾರ ದೊಡ್ಡಳ್ಳಾಪುರಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದೆ. 2004 ರಿಂದ ಆಗಿರುವ ಅಪಸವ್ಯಗಳನ್ನು ಸರಿಪಡಿಸಿ ವಸತಿ ಹೀನರಿಗೆ ಕೂಡಲೇ ವಸತಿ ಭಾಗ್ಯ ಕಲ್ಪಿಸಿ ಸರ್ಕಾರ ನಿಜಕ್ಕೂ 'ನುಡಿದಂತೆ ನಡೆದ' ಸರ್ಕಾರ ಎಂಬುದನ್ನು ಸಾಬೀತು ಪಡಿಸಲಿ. ವಸತಿಗೆ ಅರ್ಜಿ ಹಾಕಿ ಹಣ ಪಾವತಿ ಮಾಡಿದ್ದರೂ ಸಹ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ. ಸರ್ಕಾರ ಕೂಡಲೇ ವಸತಿರಹಿತರಿಗೆ ವಸತಿಯನ್ನು ನೀಡಲಿ ಎಂದು ಒತ್ತಾಯಿಸಿದ್ದಾರೆ. 

 ಗ್ರಾಮೀಣ ರಸ್ತೆಗಳ ಅಭಿವೃದ್ಧಿ:

  ಉತ್ತಮ ರಸ್ತೆಗಳಿಂದ ಆರ್ಥಿಕತೆ ಬೆಳೆಯುತ್ತದೆ, ರೈತರಿಗೆ ತಮ್ಮ ಬೆಳೆಗಳನ್ನು ಬೇಗ ಸಾಗಿಸಲು ಅನುಕೂಲ ವಾಗುತ್ತದೆ. ಆದರೆ ನಮ್ಮ ದೊಡ್ಡಬಳ್ಳಾಪುರದ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿವೆ. ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನ ದೊರೆತಿಲ್ಲ. ಆದ್ದರಿಂದ, ಸುಗಮ ಸಂಚಾರಕ್ಕೆ, ರೈತರಿಗೆ, ಗ್ರಾಮಸ್ಮರಿಗೆ ಅನುಕೂಲ ಮಾಡಿಕೊಡಲು ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕು. ಭೌಗೋಳಿಕವಾಗಿ ಅತಿ ದೊಡ್ಡ ಪ್ರದೇಶವಾಗಿರುವ, ಸುಮಾರು 298 ಕ್ಕೂ ಹೆಚ್ಚು ಹಳ್ಳಿಗಳಿರುವ ದೊಡ್ಡಬಳ್ಳಾಪುರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. 

 ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿ:

  ಭೌಗೋಳಿಕವಾಗಿ, ಜಿಲ್ಲೆಯ ಕೇಂದ್ರ ಪ್ರದೇಶದಲ್ಲಿರುವ ಹಾಗೂ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಮುಂದಿನ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಕೋರಿದ್ದಾರೆ 

 ಉದ್ಯೋಗವಾಕಾಶ:

 ನಮ್ಮ ದೊಡ್ಡಬಳ್ಳಾಪುರ ಕೈಗಾರಿಕ ಪ್ರದೇಶದಲ್ಲಿ 1.5 ಲಕ್ಷ ಕಾರ್ಮಿಕರಿದ್ದರೂ ಸಹ ಸ್ಥಳೀಯರಿಗೆ ಸೂಕ್ತ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ನೂತನ ಕೈಗಾರಿಕಾ ನಿಯಮದನ್ವಯ ಸ್ಥಳೀಯರಿಗೆ 70% ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕೆಂದು ನಿಯಮಾವಳಿಯನ್ನು ಸರ್ಕಾರ ರಚಿಸಿದೆ. ಈ ಆದೇಶದಂತೆ ತಾವು ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಲು ಸುಗ್ರೀವಾಜ್ಞೆ ಹೊರಡಿಸಬೇಕೆಂದು ಕೋರುತ್ತೇನೆ.

  ದೊಡ್ಡಬಳ್ಳಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ತಾವು ಸ್ಪಂದಿಸಬೇಕಾಗಿ ಮನವಿ ಮಾಡುತ್ತ ಮೇಲ್ಕಂಡ ಯೋಜನೆಗಳಿಗೆ ತ್ವರಿತ ಗತಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

  ಕಳೆದೆರಡು ವರ್ಷಗಳಲ್ಲಿ ಯಾವ ಸಾಧನೆಯಾಗಿದೆಯೋ ತಿಳಿಯದು, ಆದರೆ ಅಗತ್ಯ ವಸ್ತುಗಳ ಹಾಗೂ ಸೇವೆಗಳ ಬೆಲೆ ಏರಿಕೆ, ತೆರಿಗೆ ಹಾಗೂ ಸೆನ್ಸ್ ಹೆಚ್ಚಳ, ಹಣದುಬ್ಬರ, ರೈತ ವಿರೋಧಿ ನಿರ್ಧಾರಗಳಿಂದ ಸಾಮಾನ್ಯ ಜನರಿಗೆ ಸಾಕಷ್ಟು ಅನಾನುಕೂಲವಾಗಿದ್ದು ಜೀವನ ದುಸ್ತರವಾಗಿದೆ ಎಂದು ಕುಟುಕಿರುವ ಅವರು, ಈ ಸಂದರ್ಭದಲ್ಲಿ ಜನಪ್ರತಿನಿಧಿಯಾಗಿ ಅಗತ್ಯ ವಸ್ತುಗಳ ಹಾಗೂ ಸೇವೆಗಳ ದರವನ್ನು ಕಡಿಮೆ ಮಾಡಬೇಕು ಹಾಗೂ ಅನಗತ್ಯ ಸೆಸ್ ಮತ್ತು ತೆರಿಗೆ ಯನ್ನು ತೆಗೆದುಹಾಕಿ ಬಡವರಿಗೆ, ರೈತರಿಗೆ, ಶ್ರಮಿಕರಿಗೆ ಅನುಕೂಲ ಮಾಡಿಕೊಡಬೇಕು. ಸೂಕ್ತ ನೀತಿಗಳನ್ನು ರೂಪಿಸುವ ಮೂಲಕ ಹಣದುಬ್ಬರವನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಈ ಕ್ಷಣದ ಸುದ್ದಿ