
ಮೊದಲ ಎಲೆಕ್ಟ್ರಿಕ್ ವಿಮಾನ ಹಾರಾಟ ಯಶಸ್ವಿ! ಸದ್ದು, ಪರಿಸರ ಮಾಲಿನ್ಯವಿಲ್ಲ ! ಅಗ್ಗದ ದರದಲ್ಲಿ ಪ್ರಯಾಣ
ನವದೆಹಲಿ : ಅಗ್ಗದ ದರದಲ್ಲಿ ವಿಮಾನಯಾನ ಸೇವೆಯ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ. ವಿಶ್ವದ ಮೊದಲ ಎಲೆಕ್ಟ್ರಿಕ್ ವಿಮಾನ ಸಂಚಾರ ಭಾನುವಾರ ಯಶಸ್ವಿಯಾಗಿ ನಡೆದಿದೆ. ಅಮೆರಿಕದ ಬೇಟಾ ಟೆಕ್ನಾಲಜೀಸ್ ಕಂಪನಿಯ ಅಲಿಯಾ ಸಿಎಕ್ಸ್-300 ವಿದ್ಯುತ್ ಚಾಲಿತ ಪ್ರಯಾಣಿಕರ ವಿಮಾನವು ತನ್ನ ಮೊದಲ ಪ್ರಯಾಣವನ್ನು ಯಶಸ್ವಿಯಾಗಿದೆ.
ಈ ವರ್ಷಾಂತ್ಯದಲ್ಲಿ ನಾಗರಿಕ ವಿಮಾನಯಾನ ಇಲಾಖೆಯಿಂದ ಈ ವಿಮಾನ ಹಾರಾಟಕ್ಕೆ ಅನುಮತಿ ಪಡೆಯುವ ನಿರೀಕ್ಷೆಯಲ್ಲಿ ಸಂಸ್ಥೆ ಇದೆ.
ಭಾರೀ ಅಗ್ಗದ ಸಂಚಾರ
ನಾಲ್ಕು ಪ್ರಯಾಣಿಕರ ಹೊತ್ತಿದ್ದ ಈ ಪರಿಸರ ಸ್ನೇಹಿ ಕಿರು ವಿಮಾನವು ಅಮೆರಿಕದ ಈಸ್ಟ್ ಹ್ಯಾಂಪ್ಟನ್ನಿಂದ ಜಾನ್ ಎಫ್.ಕೆನಡಿ ಏರ್ಪೋರ್ಟ್ ನಡುವಿನ 130 ಕಿ.ಮೀ.ಗಳ ಪ್ರಯಾಣವನ್ನು 35 ನಿಮಿಷಗಳಲ್ಲಿ ಕ್ರಮಿಸಿದೆ. ಸಾಮಾನ್ಯವಾಗಿ ನಾಲ್ವರನ್ನು ಹೊತ್ತೊಯ್ಯಬಲ್ಲ ಸಾಮಾನ್ಯ ವಿಮಾನಕ್ಕೆ ಇಷ್ಟು ದೂರ ಕ್ರಮಿಸಲು 13,885 ರು. ಇಂಧನ ವೆಚ್ಚ ತಗಲುತ್ತದೆ. ಆದರೆ ಈ ವಿದ್ಯುತ್ ಚಾಲಿತ ವಿಮಾನಕ್ಕೆ ತಗುಲಿದ ವೆಚ್ಚ ಕೇವಲ 700 ರು.!
ಸದ್ದೇ ಇರಲ್ಲ
ಇದರ ಜತೆಗೆ ಕಡಿಮೆ ಸದ್ದು ಮಾಡುವ ಇಂಜಿನ್, ಪ್ರೊಪೆಲ್ಲರ್ಗಳಿಂದಾಗಿ ಪ್ರಯಾಣಿಕರು ಪರಸ್ಪರ ನಡೆಸುವ ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿಸುವಷ್ಟು ಪ್ರಯಾಣ ಆಹ್ವಾದಕರವಾಗಿರುತ್ತದೆ ಎಂದು ಹೇಳಲಾಗಿದೆ. ಇದೊಂದು ಸಂಪೂರ್ಣ ವಿದ್ಯುತ್ ಚಾಲಿತ ವಿಮಾನವಾಗಿದೆ. ತೀರಾ ಕಡಿಮೆ ನಿರ್ವಹಣಾ ವೆಚ್ಚದ ಈ ವಿಮಾನವನ್ನು ಕಡಿಮೆ ದೂರದ ಪ್ರಯಾಣಗಳಿಗೆ ಬಳಸಬಹುದು ಎಂದು ಬೇಟಾ ಟೆಕ್ನಾಲಜೀಸ್ನ ಸಂಸ್ಥಾಪಕ ಕೈಲ್ ಕ್ಲಾರ್ಕ್ ಹೇಳಿಕೊಂಡಿದ್ದಾರೆ.
ಉತ್ತರ ಕರ್ನಾಟಕದ ಜನರು ಇನ್ನು ಮುಂದೆ ಕಡಿಮೆ ಸಮಯದಲ್ಲಿ ನೇರವಾಗಿ ದೆಹಲಿಗೆ ಹೋಗಲು ಅನುಕೂಲ
ಹುಬ್ಬಳ್ಳಿ :
ಉತ್ತರ ಕರ್ನಾಟಕದ ಜನರು ಇನ್ನು ಮುಂದೆ ಕಡಿಮೆ ಸಮಯದಲ್ಲಿ ನೇರವಾಗಿ ದೆಹಲಿಗೆ ಹೋಗಲು ಅನುಕೂಲ ಆಗುವಂತೆ ಹುಬ್ಬಳ್ಳಿಯಿಂದ ದೆಹಲಿಗೆ ಇಂದಿನಿಂದ ವಿಮಾನಯಾನ ಸೇವೆ ಆರಂಭಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ವರ್ಚುವಲ್ ಸಭೆಯ ಮೂಲಕ ಭಾಗಿಯಾದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹುಬ್ಬಳ್ಳಿ- ದೆಹಲಿ ಮಧ್ಯದ ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸಿದರು.
ಈ ನೂತನ ವಿಮಾನಯಾನ ಸೇವೆಯಿಂದಾಗಿ ಹುಬ್ಬಳ್ಳಿ ಸೇರಿ, ಸುತ್ತಲಿನ ಜಿಲ್ಲೆಯಲ್ಲಿರುವ ಉತ್ತರ ಕರ್ನಾಟಕ ಜಿಲ್ಲೆಯ ಜನರು ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿ ವಿವಿಧ ನಗರಗಳಿಗೆ ತೆರಳಿ ಅಲ್ಲಿಂದ ದೆಹಲಿಗೆ ಹೋಗುವ ಪರದಾಟಕ್ಕೆ ಅಂತ್ಯ ಹಾಡಿದಂತಾಗಿದೆ. ಈ ವಿಮಾನ ಸೇವೆಯಿಂದಾಗಿ ಮಧ್ಯ ಕರ್ನಾಟಕದ ಹಾವೇರಿ, ದಾವಣಗೆರೆ ಜಿಲ್ಲೆಗಳು, ಕಲ್ಯಾಣ ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ, ಉತ್ತರ ಕರ್ನಾಟಕದ ಗದಗ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಜನರಿಗೆ ಅನುಕೂಲ ಆಗಲಿವಾಗದೆ. ಉದ್ಯಮಿದಾರರು, ಜನಪ್ರತಿನಿಧಿಗಳು ಮತ್ತು ಇತರೆ ವರ್ಗದವರಿಗೆ ಇದು ಅನುಕೂಲವಾಗಲಿದೆ.
ಪ್ರಗತಿಯ ಪ್ರತೀಕ:
ವಿಮಾನ ಸೇವೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಈ ನೇರ ವಿಮಾನಯಾನ ಸೇವೆ ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಾಗಿತ್ತು. ಹಿಂದೆ ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದರೆ, ಮುಂಬೈ, ಹೈದರಾಬಾದ್ ಗೆ ತೆರಳಿ ಹೋಗಬೇಕಾಗಿತ್ತು. ಹುಬ್ಬಳ್ಳಿಯಿಂದ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ದೊರೆತಿರುವುದು ನಗರದ ಪ್ರಗತಿಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ನನ್ನ ಪ್ರಸ್ತಾವನೆಯನ್ನು ಅನುಮೋದಿಸಿ, ಸೇವೆ ಪ್ರಾರಂಭಿಸುವ ನಿರ್ಧಾರ ಕೈಗೊಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮತ್ತು ಸೇವೆ ಒದಗಿಸುತ್ತಿರುವ ಇಂಡಿಗೋ ಸಂಸ್ಥೆಗೆ ಪ್ರಲ್ಹಾದ್ ಜೋಶಿ ಧನ್ಯವಾದ ಅರ್ಪಿಸಿದರು.